ಕೊಳ್ಳೇಗಾಲ : ಹೆಚ್. ಕೆ.ಮೆಮೋರಿಯಲ್ ಟ್ರಸ್ಟ್, ರೋಟರಿ ಮಿಡ್ ಟೌನ್,ರೋಟರಿ ಲಯನ್ಸ್ ಕ್ಲಬ್ ಮತ್ತು ಕನ್ನಡ ಜೀ ವಾಹಿನಿ ಇವರ ಸಹಯೋಗದಲ್ಲಿ ಕೊಳ್ಳೇಗಾಲದಲ್ಲಿ ಡಿಸೆಂಬರ್ 19 ಮತ್ತು 20 ರಂದು ಎರಡು ದಿನಗಳ ಕಾಲ ನಮ್ಮೂರ ಕನ್ನಡ ಹಬ್ಬ ಹಾಗೂ ಪೋಲೀಸರಿಗೆ ನಮನ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದು ಹೆಚ್.ಕೆ.ಟ್ರಸ್ಟ್ ಕಾರ್ಯದರ್ಶಿ ಹಾಗೂ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಪ್ರೇಮಲತಾ ಕೃಷ್ಣಸ್ವಾಮಿ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ವರ್ಷವೂ ಸಹ ಜೀ ಕನ್ನಡ ವಾಹಿನಿ ಸಹಯೋಗದೊಂದಿಗೆ ಅರ್ಜುನ್ ಜನ್ಯ ಅವರ ಸಂಗೀತ ಮನೋರಂಜನಾ ಕಾರ್ಯಕ್ರಮ ನಡೆಸಲಾಗಿತ್ತು. ನಿರೀಕ್ಷೆಗೂ ಮೀರಿದ ಯಶಸ್ಸು ಮತ್ತು ಪ್ರತಿಕ್ರಿಯೆ ವ್ಯಕ್ತವಾಯಿತು.
ಈ ಹಿನ್ನೆಲೆಯಲ್ಲಿ ಈ ವರ್ಷವೂ ಸಹ ಕೊಳ್ಳೇಗಾಲದಲ್ಲಿ ಎರಡು ದಿನಗಳ ಕಾಲ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಕೊಳ್ಳೇಗಾಲ ತಾಲ್ಲೂಕಿನ ಮತ್ತು ಸುತ್ತಲಿನ ಗ್ರಾಮೀಣ ಜನತೆಗೆ ಉತ್ತಮ ಮನೋರಂಜನೆ ನೀಡಬೇಕು ಎಂಬುದು ನಮ್ಮ ಸದುದ್ದೇಶವಾಗಿದೆ ಎಂದರು.
ದಸರ ಸಂಧರ್ಭದಲ್ಲಿ ನಡೆಯುವ ಯುವ ದಸರಾ ಮನೋರಂಜನಾ ಕಾರ್ಯಕ್ರಮ ಎಷ್ಟೋ ಜನರು ನೋಡಲು ಸಾಧ್ಯವಾಗುವುದಿಲ್ಲ. ಇದನ್ನು ಮನಗಂಡು ಯುವ ದಸರಾ ಮಾದರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಬಾರಿ ಸ್ಥಳೀಯ ಪ್ರತಿಭೆಗಳಿಗೂ ಅವಕಾಶ ನೀಡಲಾಗುತ್ತಿದೆ ಎಂದರು.
ಜಿಲ್ಲೆಯ ಹಲವಾರು ಸಾಧಕ ಪೋಲೀಸರಿಗೆ ನಮನ ಕಾರ್ಯಕ್ರಮ ಸಹ ನಡೆಸಲಾಗುತ್ತಿದೆ. ಹಾಗೇಯೇ ಎಲ್ಲಾ ತಂದೆ ತಾಯಂದಿರಿಗೆ ಅರ್ಪಣೆಯಾಗುವ ರೀತಿಯಲ್ಲಿ ಎರಡು ಸುಮಧುರ ಗೀತೆಗಳ ಧ್ವನಿಸುರುಳಿ ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಎರಡೂ ದಿನಗಳ ಕಾಲ ನಡೆಯುವ ಅದ್ದೂರಿ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು ಜನಪ್ರತಿನಿಧಿಗಳು ಭಾಗವಹಿಸುತ್ತಾರೆ. ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಮುಖಂಡರಾದ ಹರ್ಷ, ಶಿವಾನಂದ, ನಾಗರಾಜು, ಪುಟ್ಟರಸಶೆಟ್ಡಿ, ಸಂಪತ್ತು ರಾಜೇಶ್ ಇನ್ನೂ ಅನೇಕರು ಇದ್ದರು.
ವರದಿ: ನಿಂಪುವಾರ್ತೆ
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.